ಬೆಂಗಳೂರು : ಕೆಲ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ನಡೆದಿದೆ. ಪಂಚಲಿಂಗ (42) ಮೃತ ದುರ್ದೈವಿಯಾಗಿದ್ದು, ಈತ ಲಾರಿಯಲ್ಲಿ ಮರಳು ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ.
ಶುಕ್ರವಾರ ಲಾರಿ ಮನೆ ಬಳಿ ಓಡಾಡುವಾಗ ಧೂಳು ಏಳುತ್ತದೆ ಎಂಬ ಕಾರಣಕ್ಕೆ ಕೆಲವು ವ್ಯಕ್ತಿಗಳು ಪಂಚಲಿಂಗನೊಂದಿಗೆ ಗಲಾಟೆ ಮಾಡಿದ್ದರು. ಪಂಚಲಿಂಗನೊಡನೆ ಅದೇ ಊರಿನ ಚಿರಂಜೀವಿ ಎಂಬ ವ್ಯಕ್ತಿಯೂ ಸಹ ತಗಾದೆ ತೆಗೆದು ಬೆದರಿಕೆ ಹಾಕಿದ್ದ. ಇದೇ ದ್ವೇಷದ ಮೇಲೆ ಶುಕ್ರವಾರ ರಾತ್ರಿ ಇಬ್ಬರು ಸ್ನೇಹಿತರನ್ನ ಕರೆತಂದಿದ್ದ ಚಿರಂಜೀವಿ ಪಂಚಲಿಂಗನಿಗೆ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಪಂಚಲಿಂಗ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಆರೋಪಿ ಚಿರಂಜೀವಿ ಪರಾರಿಯಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ತಲಘಟ್ಟಪುರ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.